Friday, August 24, 2012

ಅಂತರ್ಧ್ವನಿ

ಲೋಕದ ನಿಯಮ ಗಾಳಿಗೆ ತೂರು
ಅಂತರ್ಧ್ವನಿಯ ಕರೆಯನು ಕೇಳು!
ನಿನ್ನನು ನೀನೇ ಮೋಸವ ಮಾಡದೆ
ನಿತ್ಯವು ಜೀವನ ಜೀವಿಸಿ ನೋಡು!!

Saturday, May 26, 2012

ಲಹರಿ

ಓಡಿತು ಚಿಗರೆ ವೈರಿಗೆ ಹೆದರಿ 
ನಾಳೆಗಳೆಲ್ಲವು ಮಾಯದ ನಗರಿ!
ಬದುಕಲಿ ಹರಿಯಲಿ ಪ್ರೀತಿಯ ಲಹರಿ 
ಅವನಿಗೆ ನಾವು ಆಟದ ಬುಗುರಿ!!

Thursday, May 3, 2012

ನನ್ನ ಪಾಡಿಗೆ ನಾನು

ಹಾಡಿನ ಧಾಟಿ ಮರೆಯುವ ಮುಂಚೆ ಪದಗಳನ್ನು ಗಟ್ಟಿ ಹೊಡೆಯಬೇಕು..
ಮುರಿದು ಬೀಳುವ ಮುಂಚೆ ಬದುಕಿಬಿಡಬೇಕು..
ಬದುಕಿಗೊಂದು ಅದಮ್ಯ ಚೈತನ್ಯ ಬೇಕಾಗಿದೆ..
ಕಲಿಯುವುದು ಬಹಳಷ್ಟಿದೆ..

ಜಲಧಿಯೊಳಗೆ ಮೀನು..
ನನ್ನ ಪಾಡಿಗೆ ನಾನು..

Friday, April 27, 2012

ಟಡಾನ್ ಟನ್ ಟಡಾನ್ !

ನೀರು ಕುಡಿದರೆ ತೂಕ ಇಳಿಯುತ್ತೆ
ಉಪ್ಪು ಬಿಟ್ಟರೆ ಬೀಪಿ ಹೋಗತ್ತೆ
ಬಿಟ್ಟಿ ಸಲಹೆಲಿ ಮಜಾ ಸಿಗತ್ತೆ 
ಟಡಾನ್ ಟನ್ ಟಡಾನ್ !

ಸ್ಕೂಲಿಗ್ ಹೋದರೆ ಡಿಗ್ರಿ ಸಿಗತ್ತೆ
ಕೆಲಸ ಮಾಡಿದ್ರೆ ಸಂಬಳ ಸಿಗತ್ತೆ
ನಿದ್ದೆ ಮಾಡಿದ್ರೆ ಏನ್ ಸಿಗತ್ತೆ?
ಟಡಾನ್ ಟನ್ ಟಡಾನ್ !

ಕಷ್ಟ ಪಟ್ಟರೆ ಫಲ ಸಿಗತ್ತೆ
ಬೆವರು ಸುರಿಸಿದರೆ ದುಡ್ಡು ಬರತ್ತೆ
ಏನು ಮಾಡಿದರೆ ಖುಷಿ ಸಿಗತ್ತೆ?
ಟಡಾನ್ ಟನ್ ಟಡಾನ್!

ಆಫೀಸ್ ನಲ್ಲಿಯೇ ನಿದ್ದೆ ಬರತ್ತೆ..
ಸ್ನಾನ ಮಾಡಿದ್ರೆ ಸುಸ್ತು ಆಗತ್ತೆ..
ಜೀವನ ಯಾಕೊ ಹೀಗ್ ಹಾಳಾಗತ್ತೆ..
ಟಡಾನ್ ಟನ್ ಟಡಾನ್ !

Saturday, April 21, 2012

ಸಂಭ್ರಮ!

ಕಾಡು ಮೇಡು ಅಲೆದು ಬಂದು ದಣಿದ ದಿನವು ಸಂಭ್ರಮ!
ಮರೆತ ಪದವು ಮತ್ತೆ ಸಿಗಲು ಬರೆವುದೊಂದು ಸಂಭ್ರಮ!
ಪಾದರಸವು ಹರಿಯುವಂತೆ, ಮನಕೆ ಖುಷಿಯು ಲಗ್ಗೆ ಇಡಲು,
ಎಲ್ಲ ಎಲ್ಲೆ ಮೀರಿ ಅಲ್ಲಿ, ಬದುಕೇ ಒಂದು ಸಂಭ್ರಮ!!

Tuesday, March 13, 2012

ಗೆಲುವಿನ ಸ್ಪರ್ಶ

ಗೆಲುವಿನ ಸ್ಪರ್ಶವು ಮೆತ್ತನೆ.. 
ಸೋಲು - ಗೆಲುವಿನ ಬಿತ್ತನೆ. 
ಬೀಸಲಿ ಗಾಳಿಯು ತಣ್ಣನೆ..
ಬದುಕಲಿ ತಿರುವು ಮೆಲ್ಲನೆ. 
ಸಾಗಲಿ ಬದುಕು ಸುಮ್ಮನೆ..ಸಾಗಲಿ ಬದುಕು ಸುಮ್ಮನೆ!

Sunday, February 12, 2012

ಬಂತು ಬಂತು ಕರೆಂಟು ಬಂತು..

೯೦ ರ ದಶಕದಲ್ಲಿ ಬಂದ ಈ ಹಾಡು, ಅಂದಿನ ಪಡ್ಡೆ ಹುಡುಗರ anthem..
ಅದ್ಭುತ ಟ್ಯೂನ್, ಭಯಂಕರ ಬೀಟ್ಸ್, ಚೆಂದದ ನೃತ್ಯ ಸಂಯೋಜನೆ, ಸುಂದರ ಹೆಣ್ಣು, ಅವಳ ಖಡಕ್ body language - ಇಷ್ಟು ಸೇರಿದರೆ ಇಂಥ ಹಾಡಿನ ಸೃಷ್ಟಿ ಆಗುತ್ತದೆ.ಹಂಸಲೇಖ ಈ ಹಾಡಿನ ಸ್ವರ ಸಂಯೋಜಕ ಮತ್ತು ಸಾಹಿತಿ.ಹಂಸಲೇಖ ದ್ವೇಷಿಗಳು ಇಲ್ಲಿಗೆ ಓದುವುದನ್ನು ನಿಲ್ಲಿಸಬೇಕಾಗಿ ವಿನಂತಿ.
ಕನ್ನಡ ಚಿತ್ರರಂಗ ಕಂಡ ಮಹಾನ್ ಕಲೆಗಾರ ಹಂಸಲೇಖ.ಆಡು ಭಾಷೆಯನ್ನು ಚಿತ್ರಸಾಹಿತ್ಯಕ್ಕೆ ಉಪಯೋಗಿಸುತ್ತಾ, ತುಂಟುತನವನ್ನು, ತತ್ವಗಳನ್ನು ಒಮ್ಮೆಲೇ ಹೇಳಿರುವ ಹಾಡು ಇದು.ಸಾಲುಗಳು ಬಾಯಲ್ಲಿ ಸುಲಭವಾಗಿ ಕೂರಬೇಕು, ಪದಗಳು ನಾಲಿಗೆಯನ್ನು ಸುಲಭವಾಗಿ ಹೊರಳಿಸಬೇಕು - ಆಗಲೇ ಹಾಡು ಪ್ರಸಿಧ್ಧವಾಗೋದು.ಈ ಹಾಡಿನಲ್ಲಿ ನನಗೆ ಇಷ್ಟವಾದ ಕೆಲವು ಸಾಲುಗಳು..

"ನವಿಲೇ ನವಿಲೇ ಸಿಟಿ ನವಿಲೇ..ಗರಿಯ ತೆರೆಯಲಾರೆಯ?"
(ಹುಡುಗನ ಪೀಟಿಕೆ. ಸಿಟಿ ನವಿಲಿಗೆ bracket ಹಾಕುವ ಪರಿ)

"ಲೈನ್-ಉ ಹೊಡಿಯೋ ಕಲೆಯಿಲ್ಲ..
ಪ್ಲಾನು ಮಾಡೋ ತಲೆಯಿಲ್ಲ..
ನಿನಗೆ ಹೆಣ್ಣೇ ಒಲಿಯೋಲ್ಲ.."
(ಹುಡುಗಿಯ ಸಾರ ಸಗಟು ತಿರಸ್ಕಾರ..ಮೇಲಿನ ಸಾಲುಗಳು ನಿಜ ಜೀವನದಲ್ಲೂ ಸತ್ಯವಾಗಿದ್ದರೆ, ನಮ್ಮ boys ಪೈಕಿ ಎಷ್ಟೋ ಜನ ಬ್ರಹ್ಮ ಚಾರಿಗಳಾಗೇ ಇರಬೇಕಿತ್ತು..ಸದ್ಯ, ವಾಸ್ತವತೆ ಬೇರೆಯಿದೆ! :D)

"ಜಗದ ಸನ್ಯಾಸಿ ಸೋಂಬೇರಿ..ನೀನು ಹು ಅಂದ್ರೆ ಸಂಸಾರಿ.."
(ಹೆಣ್ಣಿಗೆ ಇರುವ ಭಯಾನಕ ಶಕ್ತಿ..ಎಂಥವರನ್ನು ಬೀಳಿಸುವಂಥದ್ದು!..ನಾವ್ಗಳೂ ಸುಲಭವಾಗಿ ಬಿದ್ ಹೋಗ್ತೀವಿ ಅನ್ನೋದು ಬೇರೆ ವಿಚಾರ)

"ವರ್ಣ ಬೇಧ ಹೋಗಿಲ್ಲ..ಮೇಲು ಕೀಳು ಮರೆತಿಲ್ಲ..
ಒಂಟಿ ಹುಡುಗಿ ಹಿಂದೆ, ಕಳ್ಳರೆಲ್ಲ ಒಂದೇ!
ಜಾತಿ ಜಾತಿ ಸೇರೋಲ್ಲ..ಭಾಷೆ ಭಾಷೆ ಬೆರೆಯೋಲ್ಲ..
ಹುಡುಗಿ ಅಂದ್ರೆ ಮಂದಿ..ಜಾತಿ ಗೀತಿ ಚಿಂದಿ!"
(ಜಾತಿ ಪದ್ಧತಿ , ಭಾಷೆ ತಾರತಮ್ಯ , ಪ್ರಾಂತೀಯ ತಾರತಮ್ಯ - ಹೀಗೆ ನೂರಾರು ಅಸಹ್ಯ ಸುಳ್ಳುಗಳ ಮೇಲೆ ನಿಂತಿರುವ ಸಮಾಜದಲ್ಲಿ ಎಲ್ಲರನು ಒಂದೇ ರೀತಿ ಕಾಡುವ ಮಾಯೆ ಹೆಣ್ಣು! )

"ಮಿಂಚೆ ಮಿಂಚೆ ಮರಿ ಮಿಂಚೆ, ಮಿಂಚ ಹಂಚಿ ಹೊಗೆಯ?
ಮಿಂಚನ್ನು ಮುಟ್ಟಿದರೆ ಸುಟ್ಟು ಹೋಗಲಾರೆಯ?"
(ಉಬ್ಬಿಸುವ ಹುಮ್ಮಸ್ಸಿನಲ್ಲಿ ಹುಡುಗ..ಕಿತ್ತು ಒಗೆಯುವ ತವಕದಲ್ಲಿ ಹುಡುಗಿ)

ಹೀಗೆ, ಅಷ್ಟೇನೂ ಪೋಲಿ ಅಲ್ಲದ ಕಾಡುವ ಹಾಡು ಕೊಟ್ಟ ಹಂಸಲೇಖ, ರಾಜು ಸುಂದರಂ, ಸಿಲ್ಕ್ ಸ್ಮಿತಾ ಮತ್ತು "ಲಾಕಪ್ ಡೆತ್" ನ ನಿರ್ದೇಶಕ(ಥ್ರಿಲ್ಲರ್ ಮಂಜು?) - ಎಲ್ಲರಿಗು ಥ್ಯಾಂಕ್ಸ್.