Friday, August 24, 2012

ಅಂತರ್ಧ್ವನಿ

ಲೋಕದ ನಿಯಮ ಗಾಳಿಗೆ ತೂರು
ಅಂತರ್ಧ್ವನಿಯ ಕರೆಯನು ಕೇಳು!
ನಿನ್ನನು ನೀನೇ ಮೋಸವ ಮಾಡದೆ
ನಿತ್ಯವು ಜೀವನ ಜೀವಿಸಿ ನೋಡು!!

Saturday, May 26, 2012

ಲಹರಿ

ಓಡಿತು ಚಿಗರೆ ವೈರಿಗೆ ಹೆದರಿ 
ನಾಳೆಗಳೆಲ್ಲವು ಮಾಯದ ನಗರಿ!
ಬದುಕಲಿ ಹರಿಯಲಿ ಪ್ರೀತಿಯ ಲಹರಿ 
ಅವನಿಗೆ ನಾವು ಆಟದ ಬುಗುರಿ!!

Thursday, May 3, 2012

ನನ್ನ ಪಾಡಿಗೆ ನಾನು

ಹಾಡಿನ ಧಾಟಿ ಮರೆಯುವ ಮುಂಚೆ ಪದಗಳನ್ನು ಗಟ್ಟಿ ಹೊಡೆಯಬೇಕು..
ಮುರಿದು ಬೀಳುವ ಮುಂಚೆ ಬದುಕಿಬಿಡಬೇಕು..
ಬದುಕಿಗೊಂದು ಅದಮ್ಯ ಚೈತನ್ಯ ಬೇಕಾಗಿದೆ..
ಕಲಿಯುವುದು ಬಹಳಷ್ಟಿದೆ..

ಜಲಧಿಯೊಳಗೆ ಮೀನು..
ನನ್ನ ಪಾಡಿಗೆ ನಾನು..

Friday, April 27, 2012

ಟಡಾನ್ ಟನ್ ಟಡಾನ್ !

ನೀರು ಕುಡಿದರೆ ತೂಕ ಇಳಿಯುತ್ತೆ
ಉಪ್ಪು ಬಿಟ್ಟರೆ ಬೀಪಿ ಹೋಗತ್ತೆ
ಬಿಟ್ಟಿ ಸಲಹೆಲಿ ಮಜಾ ಸಿಗತ್ತೆ 
ಟಡಾನ್ ಟನ್ ಟಡಾನ್ !

ಸ್ಕೂಲಿಗ್ ಹೋದರೆ ಡಿಗ್ರಿ ಸಿಗತ್ತೆ
ಕೆಲಸ ಮಾಡಿದ್ರೆ ಸಂಬಳ ಸಿಗತ್ತೆ
ನಿದ್ದೆ ಮಾಡಿದ್ರೆ ಏನ್ ಸಿಗತ್ತೆ?
ಟಡಾನ್ ಟನ್ ಟಡಾನ್ !

ಕಷ್ಟ ಪಟ್ಟರೆ ಫಲ ಸಿಗತ್ತೆ
ಬೆವರು ಸುರಿಸಿದರೆ ದುಡ್ಡು ಬರತ್ತೆ
ಏನು ಮಾಡಿದರೆ ಖುಷಿ ಸಿಗತ್ತೆ?
ಟಡಾನ್ ಟನ್ ಟಡಾನ್!

ಆಫೀಸ್ ನಲ್ಲಿಯೇ ನಿದ್ದೆ ಬರತ್ತೆ..
ಸ್ನಾನ ಮಾಡಿದ್ರೆ ಸುಸ್ತು ಆಗತ್ತೆ..
ಜೀವನ ಯಾಕೊ ಹೀಗ್ ಹಾಳಾಗತ್ತೆ..
ಟಡಾನ್ ಟನ್ ಟಡಾನ್ !

Saturday, April 21, 2012

ಸಂಭ್ರಮ!

ಕಾಡು ಮೇಡು ಅಲೆದು ಬಂದು ದಣಿದ ದಿನವು ಸಂಭ್ರಮ!
ಮರೆತ ಪದವು ಮತ್ತೆ ಸಿಗಲು ಬರೆವುದೊಂದು ಸಂಭ್ರಮ!
ಪಾದರಸವು ಹರಿಯುವಂತೆ, ಮನಕೆ ಖುಷಿಯು ಲಗ್ಗೆ ಇಡಲು,
ಎಲ್ಲ ಎಲ್ಲೆ ಮೀರಿ ಅಲ್ಲಿ, ಬದುಕೇ ಒಂದು ಸಂಭ್ರಮ!!

Tuesday, March 13, 2012

ಗೆಲುವಿನ ಸ್ಪರ್ಶ

ಗೆಲುವಿನ ಸ್ಪರ್ಶವು ಮೆತ್ತನೆ.. 
ಸೋಲು - ಗೆಲುವಿನ ಬಿತ್ತನೆ. 
ಬೀಸಲಿ ಗಾಳಿಯು ತಣ್ಣನೆ..
ಬದುಕಲಿ ತಿರುವು ಮೆಲ್ಲನೆ. 
ಸಾಗಲಿ ಬದುಕು ಸುಮ್ಮನೆ..ಸಾಗಲಿ ಬದುಕು ಸುಮ್ಮನೆ!

Sunday, February 12, 2012

ಬಂತು ಬಂತು ಕರೆಂಟು ಬಂತು..

೯೦ ರ ದಶಕದಲ್ಲಿ ಬಂದ ಈ ಹಾಡು, ಅಂದಿನ ಪಡ್ಡೆ ಹುಡುಗರ anthem..
ಅದ್ಭುತ ಟ್ಯೂನ್, ಭಯಂಕರ ಬೀಟ್ಸ್, ಚೆಂದದ ನೃತ್ಯ ಸಂಯೋಜನೆ, ಸುಂದರ ಹೆಣ್ಣು, ಅವಳ ಖಡಕ್ body language - ಇಷ್ಟು ಸೇರಿದರೆ ಇಂಥ ಹಾಡಿನ ಸೃಷ್ಟಿ ಆಗುತ್ತದೆ.ಹಂಸಲೇಖ ಈ ಹಾಡಿನ ಸ್ವರ ಸಂಯೋಜಕ ಮತ್ತು ಸಾಹಿತಿ.ಹಂಸಲೇಖ ದ್ವೇಷಿಗಳು ಇಲ್ಲಿಗೆ ಓದುವುದನ್ನು ನಿಲ್ಲಿಸಬೇಕಾಗಿ ವಿನಂತಿ.
ಕನ್ನಡ ಚಿತ್ರರಂಗ ಕಂಡ ಮಹಾನ್ ಕಲೆಗಾರ ಹಂಸಲೇಖ.ಆಡು ಭಾಷೆಯನ್ನು ಚಿತ್ರಸಾಹಿತ್ಯಕ್ಕೆ ಉಪಯೋಗಿಸುತ್ತಾ, ತುಂಟುತನವನ್ನು, ತತ್ವಗಳನ್ನು ಒಮ್ಮೆಲೇ ಹೇಳಿರುವ ಹಾಡು ಇದು.ಸಾಲುಗಳು ಬಾಯಲ್ಲಿ ಸುಲಭವಾಗಿ ಕೂರಬೇಕು, ಪದಗಳು ನಾಲಿಗೆಯನ್ನು ಸುಲಭವಾಗಿ ಹೊರಳಿಸಬೇಕು - ಆಗಲೇ ಹಾಡು ಪ್ರಸಿಧ್ಧವಾಗೋದು.ಈ ಹಾಡಿನಲ್ಲಿ ನನಗೆ ಇಷ್ಟವಾದ ಕೆಲವು ಸಾಲುಗಳು..

"ನವಿಲೇ ನವಿಲೇ ಸಿಟಿ ನವಿಲೇ..ಗರಿಯ ತೆರೆಯಲಾರೆಯ?"
(ಹುಡುಗನ ಪೀಟಿಕೆ. ಸಿಟಿ ನವಿಲಿಗೆ bracket ಹಾಕುವ ಪರಿ)

"ಲೈನ್-ಉ ಹೊಡಿಯೋ ಕಲೆಯಿಲ್ಲ..
ಪ್ಲಾನು ಮಾಡೋ ತಲೆಯಿಲ್ಲ..
ನಿನಗೆ ಹೆಣ್ಣೇ ಒಲಿಯೋಲ್ಲ.."
(ಹುಡುಗಿಯ ಸಾರ ಸಗಟು ತಿರಸ್ಕಾರ..ಮೇಲಿನ ಸಾಲುಗಳು ನಿಜ ಜೀವನದಲ್ಲೂ ಸತ್ಯವಾಗಿದ್ದರೆ, ನಮ್ಮ boys ಪೈಕಿ ಎಷ್ಟೋ ಜನ ಬ್ರಹ್ಮ ಚಾರಿಗಳಾಗೇ ಇರಬೇಕಿತ್ತು..ಸದ್ಯ, ವಾಸ್ತವತೆ ಬೇರೆಯಿದೆ! :D)

"ಜಗದ ಸನ್ಯಾಸಿ ಸೋಂಬೇರಿ..ನೀನು ಹು ಅಂದ್ರೆ ಸಂಸಾರಿ.."
(ಹೆಣ್ಣಿಗೆ ಇರುವ ಭಯಾನಕ ಶಕ್ತಿ..ಎಂಥವರನ್ನು ಬೀಳಿಸುವಂಥದ್ದು!..ನಾವ್ಗಳೂ ಸುಲಭವಾಗಿ ಬಿದ್ ಹೋಗ್ತೀವಿ ಅನ್ನೋದು ಬೇರೆ ವಿಚಾರ)

"ವರ್ಣ ಬೇಧ ಹೋಗಿಲ್ಲ..ಮೇಲು ಕೀಳು ಮರೆತಿಲ್ಲ..
ಒಂಟಿ ಹುಡುಗಿ ಹಿಂದೆ, ಕಳ್ಳರೆಲ್ಲ ಒಂದೇ!
ಜಾತಿ ಜಾತಿ ಸೇರೋಲ್ಲ..ಭಾಷೆ ಭಾಷೆ ಬೆರೆಯೋಲ್ಲ..
ಹುಡುಗಿ ಅಂದ್ರೆ ಮಂದಿ..ಜಾತಿ ಗೀತಿ ಚಿಂದಿ!"
(ಜಾತಿ ಪದ್ಧತಿ , ಭಾಷೆ ತಾರತಮ್ಯ , ಪ್ರಾಂತೀಯ ತಾರತಮ್ಯ - ಹೀಗೆ ನೂರಾರು ಅಸಹ್ಯ ಸುಳ್ಳುಗಳ ಮೇಲೆ ನಿಂತಿರುವ ಸಮಾಜದಲ್ಲಿ ಎಲ್ಲರನು ಒಂದೇ ರೀತಿ ಕಾಡುವ ಮಾಯೆ ಹೆಣ್ಣು! )

"ಮಿಂಚೆ ಮಿಂಚೆ ಮರಿ ಮಿಂಚೆ, ಮಿಂಚ ಹಂಚಿ ಹೊಗೆಯ?
ಮಿಂಚನ್ನು ಮುಟ್ಟಿದರೆ ಸುಟ್ಟು ಹೋಗಲಾರೆಯ?"
(ಉಬ್ಬಿಸುವ ಹುಮ್ಮಸ್ಸಿನಲ್ಲಿ ಹುಡುಗ..ಕಿತ್ತು ಒಗೆಯುವ ತವಕದಲ್ಲಿ ಹುಡುಗಿ)

ಹೀಗೆ, ಅಷ್ಟೇನೂ ಪೋಲಿ ಅಲ್ಲದ ಕಾಡುವ ಹಾಡು ಕೊಟ್ಟ ಹಂಸಲೇಖ, ರಾಜು ಸುಂದರಂ, ಸಿಲ್ಕ್ ಸ್ಮಿತಾ ಮತ್ತು "ಲಾಕಪ್ ಡೆತ್" ನ ನಿರ್ದೇಶಕ(ಥ್ರಿಲ್ಲರ್ ಮಂಜು?) - ಎಲ್ಲರಿಗು ಥ್ಯಾಂಕ್ಸ್.

Saturday, January 21, 2012

ದಾಂಡ್ ಕ್ರಿಕೆಟ್!


"ಯಂ ಬ್ರಹ್ಮ, ವರುಣ ಇಂದ್ರ ರುದ್ರ ಮರುತಹ.." ಆದಮೇಲೆ "ವಂದೇ ಮಾತರಂ". ಅದಾದಮೇಲೆ ಚಂದ್ರಶೇಖರಯ್ಯ  ಅವರಿಂದ "ಶಾಲೆ" ಅಂತ ಸುದೀರ್ಘವಾದ ಭಾಷಣ. ಕೊನೆಗೆ "ಜನ ಗಣ ಮನ" ಹಾಡಿ ಮುಗಿಸಿ ತರಗತಿಗೆ ಬರುವ ಹೊತ್ತಿಗೆ ನಮ್ಮಲ್ಲೇ ಒಬ್ಬ, ಶಿಕ್ಷಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ, "LNR is on leave..free period"  ಅನ್ನುತ್ತಿದ್ದ..ನಾವೆಲ್ಲ ಒಕ್ಕೋರಲಿನಲ್ಲಿ  "ಗೇಮ್ಸ್" ಎಂದು ಕಿರುಚಿ ವಿಜಯ ಹೈ ಸ್ಕೂಲ್ ನ ಹಿಂಬದಿಯ ಬಾಗಿಲಿಂದ ಮೈದಾನದ ಕಡೆಗೆ ಓಡುತ್ತಿದ್ದೆವು. ನಾವು ಆಡುತ್ತಿದ್ದದ್ದು ಒಂದೇ ಆಟ - ದಾಂಡ್ ಕ್ರಿಕೆಟ್!

ನಮ್ಮದು "G" ಸೆಕ್ಶನ್. "G" ಫಾರ್  "ಗೀಕ್ಸ್" ಎಂದು ಕೆಲವರು ಕರೆದರೆ, ಇನ್ನು ಕೆಲವರು "G" ಫಾರ್ "ಗೂಬೆಸ್" ಅನ್ನುತ್ತಿದ್ದರಂತೆ. "G" ಸೆಕ್ಶನ್ ಹುಡುಗರಿಗೆ ಇದ್ದ ಸಮಾನ ಆಸಕ್ತಿಗಳು ಎರಡು. ಒಂದು "ಗಟ್ ಹಾಕೋದು". ಎರಡೆನಯದು -  ದಾಂಡ್ ಕ್ರಿಕೆಟ್!

ಸುಮಾರು ಮೂರು ಅಡಿ ಉದ್ದದ, ಎಗ್ಗು ತಗ್ಗುಗಳಿಲ್ಲದ circular cross-section ಇದ್ದಂತಹ, ಸದೃಢ ವಾದ ಮರದ ರೆಂಬೆಯ ತುಂಡು - ದಾಂಡಿನ ಮೊದಲನೆಯ ವರ್ಶನ್. ಈ ದಾಂಡನ್ನು ನಾವು ಮೋರಿಯಲ್ಲಿ ಉದುರಿದ ಏಲೆಗಳ ಕೆಳಗೆ ಬಚ್ಚಿಡುತ್ತಿದ್ದೆವು. ಪೀಟೋಪಕರಣಗಳಿಗೆ ಉಪಯೋಗಿಸುವ ಬೆತ್ತ, ದಾಂಡಿನ ಎರಡನೇ ಆವೃತ್ತಿ. ರಘಿ ತರುತ್ತಿದ್ದ ಸ್ಟಿಕ್ಕರ್ ಇಲ್ಲದ ಬ್ಯಾಟಿಗೆ ನಾವು ತೇರ್ಗಡೆ ಯಾದದ್ದು ಬಹಳ ದಿನಗಳ ನಂತರ.

ದಾಂಡ್ ಕ್ರಿಕೆಟಿನ ಶುರುವಿನ ದಿನಗಳಲ್ಲಿ ನಾವು "ಕೋರ್ ಕೊಂಡು" ಆಡುತ್ತಿದ್ದೆವು. ವಿಜೆಯ್ ನಿಮ್ಕಡೆ. ಅಚ್ಚು ನಮ್ಕಡೆ. raichur ನಿಮಗೆ. ಧರ್ಣಿ ನಮಗೆ. ಅಭಿ ನಮಗಿರಲಿ. JP ನಿಮಗೆ. ವಿನ್ನಿ ನಿಮ್ಕಡೆ. ಕಾಮೇಶ ನಮ್ಕಡೆ. ಹೀಗೆ. ಅಮೇಲಿನ ದಿನಗಳಲ್ಲಿ ನಾವು "ಕೊರುತ್ತಿರಲಿಲ್ಲ". ನಮ್ಮಲ್ಲಿ ೨ ತಂಡಗಳು ರೂಪು ಗೊಂಡಿದ್ದವು. ತಂಡಗಳಲ್ಲಿ ಬದಲಾವಣೆಗಳು ಇರಲಿಲ್ಲ. ಈ ಎರಡು ತಂಡಗಳೇ ಸದಾ ಮುಖಾಮುಖೀ ಆಗುತ್ತಿದ್ದವು. "ಗಟ್" ಪಂಡಿತರಾದ ನಮಗೆ ಆಡಿದ ಮ್ಯಾಚ್ ಗಳ ಲೆಕ್ಕ, ಸೋಲು ಗೆಲುವಿನ ಲೆಕ್ಕ ನೆನಪಿಡುವುದು ಕಷ್ಟವಾಗುತ್ತಿರಲಿಲ್ಲ. ಗೆಲುವುಗಳ ಲೆಕ್ಕ ನಮ್ಮ ಸಾಧನೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿತ್ತು.

ನಾವು ದಾಂಡ್ ಕ್ರಿಕೆಟ್ ಆಡುತ್ತಿದ್ದ ಮೈದಾನದ ಹೆಸರು "triangular field". ಅದು ಬೌಲಿಂಗ್ ಮ್ಯಾಚ್ ಆಡುವಷ್ಟು ದೊಡ್ಡದಾಗಿರಲಿಲ್ಲ. ಹಾಗಾಗಿ ನಾವು "ಥ್ರೋ" ಆಡುತ್ತಿದ್ದೆವು. "legside" ನಲ್ಲಿ ಜಾಗ ಕಡಿಮೆ ಇದ್ದಿದ್ದರಿಂದ ನಾವು "1d, 2d" ಗಳನ್ನು ಉಪಯೋಗಿಸುತ್ತಿದ್ದೆವು.  "triangular field" ನ ಸುತ್ತಲೂ ರಸ್ತೆಗಳು. ಒಂದು ರಸ್ತೆಯ ಆಚೆ ಅಪ್ರಯೋಜಕ ಗಿಡಗಳಿದ್ದ ಸಣ್ಣ ಕಾಡು. ಅದನ್ನು ನಾವು ಮೊದಮೊದಲು "jurassic park" ಎಂದು ಕರೆಯುತ್ತಿದ್ದೆವು. ಅಲ್ಲಿ ಬಹಳ ಚೆಂಡುಗಳು ಕಳೆದು ಹೋಗುತ್ತಾ ಇದ್ದರಿಂದ ಅದನ್ನು ನಾವು "lost world" ಎಂದು ಮರು ನಾಮಕರಣ ಮಾಡಿದೆವು.

ಒಂದು ದಿನ ಸುಮಾರು ೧೦೦ kg ಭಾರವಿದ್ದ ಒಂದು size ಕಲ್ಲನ್ನು ಯಾರೋ ನಮ್ಮ ಮೈದಾನ ದಲ್ಲಿ ತಂದು ಹಾಕಿದ್ದರು. ಅಂದಿನಿಂದ ಅದು ನಮ್ಮ ಆಟಕ್ಕೆ ವಿಕೆಟ್ ಆಯಿತು. ಆ ಕಲ್ಲನ್ನು ನೆಟ್ಟಗೆ ನಿಲ್ಲಿಸುವುದು ಒಂದು ಭಗೀರತ ಪ್ರಯತ್ನ. ಒಮ್ಮೊಮ್ಮೆ ಅದು ಸರಿಯಾಗಿ ನಿಲ್ಲದೆ ಬ್ಯಾಟ್ಸಮನ್ ಕಾಲ ಮೇಲೆ ಬಿದ್ದು ಅಪಾಯ ವಾಗುತ್ತಿತ್ತು. JP ಮತ್ತು ವಿನ್ನಿ ಅದರ ಫಲಾನುಭವಿಗಳು.

ವಿ.ಹೆಚ್. ಎಸ್. ನಲ್ಲಿದ್ದ ೩ ವರ್ಷಗಳೂ ನಾವು "triangular field" ನಲ್ಲಿ  ದಾಂಡ್ ಕ್ರಿಕೆಟ್ ಆಡಿದೆವು. ಇದರಿಂದ ಎಷ್ಟೋ ಗೆಳೆತನಗಳು ಚಿಗುರಿದವು. ಜೀವದ ಗೆಳೆಯರು ಸಿಕ್ಕರು. ಬದುಕಿನ ಒಂದು ಅದ್ಭುತ ಸುಂದರ ನೆನಪು ದಾಂಡ್ ಕ್ರಿಕೆಟ್!

ನಮ್ಮ ಟೀಂ: ಅಚ್ಚು, ಅಭಿ, ವಿಜೆಯ್, ಧರಣಿ, JP, JV, MN, SN, ಪುಟ್ರಿ, ವಿಕಾಸ್, ಬೊಂಡು, ಭರತು, ಅರವಿಂದ್, ಪ್ರವೀಣ, ರಘಿ, ರಾಜಿ, ಜಿಗಣಿ, ರಾಯ್ಚುರ್, ಅನಂತ, ಕೆರ, ಅನಿಲ, ಹಲ್ಲಿ, ಸ್ಯಾಡು, ಸತೀಶ, ಕಡಂಬೆ, ವಿನ್ನಿ, ಕಾಮೇಶ, ಸಮೀರ್, ಗಿರೀಶ, ಚಂದ್ರಕೀರ್ತಿ, ಹಬ್ಬು - ಸದ್ಯಕ್ಕೆ ನೆನಪಿರುವುದು ಇಷ್ಟು..

Thursday, January 19, 2012

ಬರವಣಿಗೆ ಕಷ್ಟ!

ತಲೆಯಲ್ಲಿರುವ ಆಲೋಚನೆಗಳನ್ನು ಪುಟಗಳ ಮೇಲೆ ಹರಡುವ ಕ್ರಿಯೆ ಕಷ್ಟದ್ದು. ರಾಜಾರೋಷವಾಗಿ ತಲೆಯಲ್ಲಿ ತಿರುಗುವ ಯೋಚನೆಗಳು ಹೊರಗೆ ಬರುವ ಹೊತ್ತಿಗೆ ಹಲವಾರು ಬೇಲಿಗಳನ್ನು ಎದುರು ಗೊಳ್ಳುತ್ತವೆ. 

ಪದಗಳ ಪ್ರಯೋಗ ಸರಿಯಾಗಿದೆಯೇ? ಸಾಲುಗಳು ದೊಡ್ದದಾಯಿತೆ? ಉಪಮೆಗಳು? ಅರ್ಥ? ವ್ಯಾಕರಣ? ಸರಳತೆ? ಸ್ಪಷ್ಟತೆ? ಗ್ರಾಂಥಿಕ ಭಾಷೆಯಲ್ಲಿ ಬರೆಯಲಾ ಅಥವಾ ಟಪೋರಿ ಭಾಷೆ ಉಪಯೋಗಿಸಲಾ? ಕತ್ರಿ, ಛತ್ರಿ, ಬಿತ್ರಿ ಎಂಬ ಚಮಕ್ ಪದಗಳನ್ನು ಚಲಾವಣೆ ಮಾಡಲಾ ಅಥವಾ ವೃತ್ತಾಂತ, ದೃಷ್ಟಾಂತ, ಸಿದ್ದಾಂತ ಎಂಬಂತಹ ಭಾರವಾದ ಪದಗಳು ಬೇಕ? ರಾಕೆಟ್ ಇಂದ ರಬ್ಬರ್ ವರೆಗೂ ಎಲ್ಲದರ ಬಗ್ಗೇನೂ ಜನ ಬರೆದಿದ್ದಾಗಿದೆ. ಇನ್ನು ನಾನು ಬರೆಯುವುದೆನಿದೆ..ಮಣ್ಣಂಗಟ್ಟಿ. ಹೀಗಿದ್ದರೂ ಬರೆಯಬೇಕೆ?

ಇಂತಹ ಎಷ್ಟೋ ಬೇಲಿಗಳನ್ನು ಗಾಯಗೊಳ್ಳದೆ ದಾಟಿ ಬರುವ ಆಲೋಚನೆಗಳ ಪೈಕಿ ಬರೆಸಿಕೊಳ್ಳಲು ಅರ್ಹವಾದವು ಎಷ್ಟೋ..ವರ್ಜ್ಯ ಎಷ್ಟೋ? ಯಾವೊನಿಗೊತ್ತು..ಶಿವಪ್ಪ ಕಾಯೋ ತಂದೆ..ಬರವಣಿಗೆ ಕಷ್ಟ!

Saturday, January 14, 2012

ಪಾರ್ಥನಿಗೆ ಕೃಷ್ಣ

ಹಂಬಲದ ದಾಹ..ಎಂದೂ ತೀರದ ಮೋಹ..
ದುರಹಂಕಾರಿಯ ಗರ್ವ, ಸೋಲಿನ ಮೊದಲನೇ ಪರ್ವ..
ಅನ್ನಕ್ಕೆ ವಗ್ಗರಣೆ..ಅರ್ಘ್ಯಕ್ಕೆ ಉದ್ಧರಣೆ..
ಆಡುವ ಮಾತಲಿ ಅರ್ಥ, ಇರದೇ ಇದ್ದರೆ ವ್ಯರ್ಥ..
ನೆನಪಿರದ ಕನಸು..ಕೂಡಿಟ್ಟ ಮುನಿಸು..
ನೈಜತೆ  ಇಲ್ಲದ ಬದುಕು, ತೊಳೆಯಲು ಆಗದ ಕೊಳಕು..
ಪಾರ್ಥನಿಗೆ ಕೃಷ್ಣ, ನಮಗೆ ಯಾರೋ? ಎತ್ತ?